05/04/2021
ನಟ Vijay Sanchari ಕಿಡ್ನಿ ಕಳೆದುಕೊಂಡ ಮಹೇಂದ್ರ ಎಂಬ ಹುಡುಗನೊಬ್ಬನ ಬಗ್ಗೆ ಬರೆದಿದ್ದಾರೆ. ‘ಹರ್ಬಲ್ **ಫ್’ ಬಳಸಿದ್ದರ ಕುರಿತು ಆ ಸಂತ್ರಸ್ತ ಹುಡುಗ ವಿಜಯ್ ಬಳಿ ಹೇಳಿದ್ದೆಲ್ಲಾ ನೂರಕ್ಕೆ ನೂರು ಸತ್ಯ. ‘ಹರ್ಬಲ್ **ಫ್’ ಎನ್ನುವುದು ಜಗತ್ತಿನ ಬಹುದೊಡ್ಡ ಕುಖ್ಯಾತ ಚೈನ್ ಲಿಂಕ್ ಬಿಸಿನೆಸ್. ಇವರು ಪ್ರೋಟೀನ್ ಮಿಕ್ಸ್ ಹೆಸರಿನಲ್ಲಿ ಸ್ಟಿರಾಯ್ಡುಗಳನ್ನು ತಿನ್ನಿಸುತ್ತಿದ್ದಾರೆ ಎನ್ನುವ ಅನುಮಾನಗಳಿವೆ. ಯಾವ ದಾಖಲೆಗಳಲ್ಲೂ ‘ಹರ್ಬಲ್ **ಫ್’ ಪುಡಿಗಳನ್ನು ಔಷಧ ಎಂದು ಬರೆದಿರುವುದಿಲ್ಲ. ಪೂರಕ ಆಹಾರ ಎಂದೇ ನೋಂದಣಿಯಾಗಿರುತ್ತದೆ. ಹಾಗಾಗಿ ಡ್ರಗ್ ಕಂಟ್ರೋಲ್ ಆಕ್ಟುಗಳ ಕೆಳಗೆ ಬರುವುದಿಲ್ಲ. ಆದರೆ ಚೈನ್ ಲಿಂಕ್ ಬಿಸಿನೆಸ್ಸುಗಳ ಮೀಟಿಂಗುಗಳಲ್ಲಿ ಇವರ ಪ್ರಾಡಕ್ಟುಗಳನ್ನೆಲ್ಲಾ ಹರ್ಬಲ್ ಔಷಧಿಗಳು ಎಂದೇ ಬಾಯಿಂದ ಬಾಯಿಗೆ ಪ್ರಚಾರ ಮಾಡಲಾಗುತ್ತದೆ. ಜನ ಗಿಡ ಮೂಲದ ಔಷಧ ಎಂದಾಗ ಅದು ಸೇಫ್ ಎಂದು ಸುಲಭವಾಗಿ ಭಾವಿಸುತ್ತಾರೆ. ಜೊತೆಗೆ ಹೊಸ ಮೆಂಬರುಗಳನ್ನು ಸೇರಿಸುತ್ತಾ ಅವರಿಗೆ ಈ ಪ್ರಾಡಕ್ಟುಗಳನ್ನು ಮಾರಿ ಕಮಿಷನ್ ಸಂಪಾದಿಸಬಹುದೆಂಬ ಆಸೆಯಿಂದ ಬಳಸಲು ಶುರು ಮಾಡುತ್ತಾರೆ. ಯಾವುದೇ ಆರೋಗ್ಯ ಸಮಸ್ಯೆಗೂ ಈ ಪುಡಿಗಳು ಮದ್ದಾಗಬಲ್ಲವು, ಸಂಪಾದನೆಯ ಮಾರ್ಗವೂ ಆಗಬಲ್ಲವು ಎಂದಾಗ ಜನ ಹೆಚ್ಚು ಯೋಚಿಸುವುದಿಲ್ಲ. ಬಹುತೇಕ ಬಾರಿ ಇವರು ಮಿಶನರಿಗಳಿಗಿಂತಲೂ ಉಗ್ರವಾಗಿ `ಹರ್ಬಲ್ **ಫ್' ಪ್ರಾಡಕ್ಟುಗಳನ್ನು ಪ್ರಚಾರ ಮಾಡಿ ಮಾರುತ್ತಾರೆ.
‘ಹರ್ಬಲ್ **ಫ್’ ನ ಈ ಪುಡಿಗಳಲ್ಲಿ ಮುಖ್ಯವಾಗಿ ಸೋಯಾ ಪ್ರೋಟೀನ್ ಇದೆ ಎಂದು ಕಂಪನಿಯ ಲೇಬಲ್ಲುಗಳಲ್ಲಿ ಹೇಳಲಾಗುತ್ತದೆ. ಆದರೆ ಜನರ ಆರೋಗ್ಯ ಸಮಸ್ಯೆಗಳಿಗೆ ಬರೀ ಪ್ರೋಟೀನುಗಳಿಂದಲೇ ಪರಿಹಾರಗಳನ್ನು ಒದಗಿಸಲಾಗದು. ಜೊತೆಗೆ ಬಳಸುವವರಿಗೆ ದಿಢೀರ್ ನೋವು, ಸಮಸ್ಯೆ ಉಪಶಮನದ ಅನುಭವವೂ ಆಗಬೇಕು. ಅದಕ್ಕಾಗಿ ಪೂರಕ ಆಹಾರಗಳಲ್ಲಿ ಬಳಸಬಾರದ ಹಲವು ಸ್ಟಿರಾಯ್ಡುಗಳನ್ನು ಬಳಸುತ್ತಾರೆಂಬ ಅನುಮಾನಗಳಿವೆ. ಈ ಅನುಮಾನಗಳಿಗೆ ಕಾರಣಗಳಿಲ್ಲದೆ ಇಲ್ಲ. ಹರ್ಬಲ್ ಪುಡಿಗಳನ್ನು ಬಳಸುತ್ತಿರುವ ಅವಧಿಯಲ್ಲಿ ರೋಗಿಗಳಿಗೆ ದೇಹದಲ್ಲಿ ನೋವು ಕಳೆದು ಹೋದ ಅನುಭವ ಆಗುತ್ತಿರುತ್ತದೆ. ದೇಹ ಮನಸ್ಸು ಹೊಸ ಚೈತನ್ಯ ಹೊಂದಿದಂತೆ ಭಾಸವಾಗುತ್ತದೆ. ಕ್ರಮೇಣ ಇದು ಅಡಿಕ್ಷನ್ ಆಗಿ ಹೋಗುತ್ತದೆ. ಹರ್ಬಲ್ ಪುಡಿ ಸೇವಿಸುವುದು ಬಿಟ್ಟರೆ ಸಮಸ್ಯೆ ಮರುಕಳಿಸಿದಂತೆ. ಕೆಲವೇ ದಿನಗಳ ನಿರಂತರ ಬಳಕೆಯ ನಂತರ ಬೋನಸ್ ಆಗಿ ಕಿಡ್ನಿ, ಹೃದಯ ಸೇರಿದಂತೆ ದೇಹದ ಪ್ರಮುಖ ಅಂಗಾಗಗಳು ಘಾಸಿಕೊಂಡಿರುತ್ತವೆ.
ನನ್ನ ಸಂಪರ್ಕಕ್ಕೆ ಬಂದ ನಾಲ್ಕು ಪ್ರಕರಣಗಳನ್ನು ವಿವರಿಸುವ ಮೂಲಕ ‘ಹರ್ಬಲ್ **ಫ್’ ಕುರಿತು ಒಂದು clear picture ನಿಮಲ್ಲಿ ಮೂಡಿಸಲು ಪ್ರಯತ್ನಿಸುವೆ.
ನನಗೆ ಗೊತ್ತಿರುವ ಅದಾಗಲೇ ನಿತ್ರಾಣಗೊಂಡಿದ್ದ ಒಬ್ಬರು ಕ್ಯಾನ್ಸರ್ ಪೇಷಂಟ್ ‘ಹರ್ಬಲ್ **ಫ್’ ಪುಡಿ ಬಳಸಲು ಆರಂಭಿಸಿ ಎದ್ದು ಓಡಾಡಲು, ಕೆಲಸಗಳನ್ನು ತಾವೇ ಮಾಡಿಕೊಳ್ಳಲು ಆರಂಭಿಸಿದ್ದರು. ಇಷ್ಟರಲ್ಲೆ ‘ಹರ್ಬಲ್ **ಫ್ ’ ಪುಡಿ ಸೇವನೆಯಿಂದ ಕ್ಯಾನ್ಸರ್ ವಾಸಿಯಾಯಿತಂತೆ ಎಂದು ಸುತ್ತಮುತ್ತಲ ಊರುಗಳಲ್ಲಿ ಪ್ರಚಾರವಾಗಿತ್ತು. ಆರೋಗ್ಯ ಸಮಸ್ಯೆಗಳಿದ್ದ ಜನ ತಾ ಮುಂದು ನಾ ಮುಂದು ಎಂದು ತಿನ್ನಲು ಶುರು ಮಾಡಿದ್ದರು. ನನ್ನ ಪರೋಕ್ಷ ಎಚ್ಚರಿಕೆಯನ್ನು ಯಾರೂ ಕೇಳಿಸಿಕೊಳ್ಳಲಿಲ್ಲ. ಅದಾದ ಮೂರು ತಿಂಗಳಿಗೆ ಅವರು ಇಲ್ಲವಾದರು.
ಇನ್ನೊಂದು ಕೇಸು ವಯಸ್ಸಾದ ಸ್ನೇಹಿತರೊಬ್ಬರದು. ಕಾಲಿನಲ್ಲಿ ಶುಗರ್ ಹೆಚ್ಚಾದ್ದರಿಂದ ಆದ ಧೀರ್ಘ ಕಾಲದ ಗಾಯದ ನೋವನ್ನು ಮರೆಯಲಿಕ್ಕೆ ಈ ಪುಡಿಯನ್ನು ತಿನ್ನಲು ಆರಂಭಿಸಿ ಒಂದು ವಾರ ತೆಗೆದುಕೊಳ್ಳುವಷ್ಟರಲ್ಲೇ ಅವರ ಬೀಪಿ ಸಿಕ್ಕಾಪಟ್ಟೆ ಏರುಪೇರಾಗಿ ವಾಂತಿ ಹೆಚ್ಚಾಗಿ ಊಟ ಸೇರದದಾಯಿತು. ಕಿಡ್ನಿ ಪರೀಕ್ಷೆಯಲ್ಲಿ creatinine ಅಂಶ ಏರುಪೇರಾಗಿತ್ತು. ಒಂದಷ್ಟು ಔಷಧ ಶುಶ್ರೂಶೆಗಳಾದವಾದರೂ ಒಂದು ತಿಂಗಳ ಕೊನೆಗೆ ಎರಡೂ ಕಿಡ್ನಿಗಳು ವಿಫಲವಾಗಿವೆಯೆಂದು ಘೋಷಿಸಿ ಡಯಾಲಿಸಿಸ್ ಆರಂಭಿಸಲಾಯಿತು. ಆ ನಂತರದ್ದು ಇನ್ನೊಂದೇ ಕತೆ. ಅವರಿಗೆ ಡಯಾಲಿಸಿಸ್ ಕೂಡ ಹೊಂದಿಕೊಳ್ಳದೆ ಮೂರ್ನಾಲ್ಕು ತಿಂಗಳು ನರಳಿ ಪ್ರಾಣ ಬಿಟ್ಟರು.
ಮೂರನೆಯವರು ಆರೋಗ್ಯವಂತರಾಗಿದ್ದ ನನ್ನ ಸಂಬಂಧಿ. ಎತ್ತರವಾಗಿದ್ದು ಡೊಳ್ಳು ಹೊಟ್ಟೆ ಬೆಳೆಸಿಕೊಂಡಿದ್ದ ಅವರಿಗೆ ಕಾಲು ನೋವು ಆರಂಭವಾಗಿತ್ತು. ವಾಕಿಂಗ್, ಸೈಕ್ಲಿಂಗ್ ಇತ್ಯಾದಿ ಮಾಡಿ ಸರಿ ಮಾಡಿಕೊಳ್ಳಿ ಎಂದರೂ ಸಹಜ ಸೋಮಾರಿತನದಿಂದಾಗಿ ಮಾಡುತ್ತಿರಲಿಲ್ಲ. ಯಾರೋ ಗೆಳೆಯರೊಬ್ಬರು ನನಗೂ ‘ಹರ್ಬಲ್ **ಫ್’ ಪುಡಿ ಸೇವಿಸಿದ್ದರಿಂದ ಕಾಲು ನೋವು ವಾರದಲ್ಲೆ ವಾಸಿಯಾಯಿತು ಎಂದು ಹೇಳಿದ್ದನ್ನು ನಂಬಿ ಹರ್ಬಲ್ ಪುಡಿ ಸೇವಿಸಲು ಆರಂಭಿಸಿದರು. ವಿಷಯ ಗೊತ್ತಾದ ನಾನು ಹಲವು ಭಾರಿ ಫೋನ್ ಮಾಡಿ ಎಚ್ಚರಿಸಿದ್ದೆ. ಅವರು dont care ಅನ್ನೋ ತರ ಬಿಸಿನೆಸ್ ಶುರು ಮಾಡಿಕೊಂಡರು. ವಾರದಲ್ಲೇ ಅವರ ಕಾಲಿನ ನೋವು ಮಾಯವಾಗಿತ್ತು. ಬೆಂಗಳೂರಿನಿಂದ ಚೀಲಗಟ್ಟಲೆ ಹರ್ಬಲ್ ಪುಡಿಯ ಡಬ್ಬಗಳನ್ನು ತಂದು ಹೊಸ ಮೆಂಬರುಗಳಿಗೆ ಮಾರಿ ಲಾಭ ಮಾಡಲು ಆರಂಭಿಸಿದರು. ಅದಾಗಿ ವರ್ಷವಾಗುವಷ್ಟರಲ್ಲೆ ಅವರಿಗೆ ಹೃದಯದ ಸಮಸ್ಯೆ ಕಾಣಿಸಿಕೊಂಡಿತು. ಆಮೇಲೆ ಜಯದೇವ ಆಸ್ಪತ್ರೆಗೆ ಹೋಗುತ್ತಲೇ ಹರ್ಬಲ್ ಪುಡಿಯ ಬಾಟಲುಗಳನ್ನೂ ತರುತ್ತಿದ್ದರಂತೆ. ಇತ್ತೀಚಿಗೆ ಅವರಿಗೂ ಹೃದಯದ ಸಮಸ್ಯೆ ಗಂಭೀರ ಹಂತದಲ್ಲಿದೆ ಎಂದು ಊರ ಕಡೆಯ ಸ್ನೇಹಿತರೊಬ್ಬರು ಹೇಳುತ್ತಿದ್ದದ್ದು ಕಿವಿಗೆ ಬಿತ್ತು.
ಕೊನೆಯವರು ನನ್ನ ಮಧ್ಯವಯಸ್ಕ ಸ್ನೇಹಿತರು, ‘ಹರ್ಬಲ್ **ಫ್’ ಪುಡಿ ಎನ್ನುವುದು ಫ್ರೊಟೀನ್ ಮಿಕ್ಸ್ ಹೊರತು ಬೇರೇನೂ ಅಲ್ಲ, ನಮ್ಮಲ್ಲಿ ಈಗಿರುವುದು ಬಹಳ ಸಮರ್ಥವಾದ ಬಲಿಷ್ಟ ಪ್ರಾಮಾಣಿಕ ಸರ್ಕಾರ. ಈಗೀಗ, ಕಾನೂನುಗಳು ಬಹಳ ಸ್ಟ್ರಿಕ್ಟ್ ಆಗಿವೆ, ಸ್ಟಿರಾಯ್ಡು ಬೆರೆಸಿ ಮಾರುವುದು ಅಸಾಧ್ಯ ಎಂದು ಭೇಟಿಗೆ ಸಿಕ್ಕಾಗಲೆಲ್ಲಾ ವಾದಿಸುತ್ತಿದ್ದರು. ಅವರೂ ವರ್ಷಗಳ ಕಾಲ ‘ಹರ್ಬಲ್ **ಫ್’ ಬಳಸಿದ್ದರು. ಆಮೇಲೆ ಕುಟುಂಬದ ವೈದ್ಯರೊಬ್ಬರ ಒತ್ತಾಯಕ್ಕೆ ಬಿಟ್ಟಿದ್ದರು.ಕಳೆದ ವರ್ಷದ ಜನವರಿಯಲ್ಲಿ ಬ್ರೈನ್ ಹ್ಯಾಮರೇಜ್ ಆಗಿ ಮೂರು ದಿನ ಕೋಮದಲ್ಲಿದ್ದು ಇಲ್ಲಿನ ವ್ಯಾಪಾರ ಮುಗಿಸಿ ಹೊರಟೇ ಹೋದರು.
ಮೇಲಿನ ನಾಲ್ಕೂ ಜನರಿಗೂ ನಾನು ನೇರವಾಗಿ, ಪರೋಕ್ಷ ವಾಗಿ ಹಲವು ಸಲ ಎಚ್ಚರಿಸಿದ್ದೆ. ನನ್ನ ಗಮನಕ್ಕೆ ಬಂದ ಬೇರೆ ಇನ್ನೊಂದಷ್ಟು ಸಂತ್ರಸ್ತರ ವಿಚಾರ ತಿಳಿಸಿದ್ದೆ. ಆದರೆ ಯಾವುದೂ ಉಪಯೋಗಕ್ಕೆ ಬರಲಿಲ್ಲ. ‘ಹರ್ಬಲ್ **ಫ್’ ಸಂತ್ರಸ್ತರು ಕಾನೂನಿನ ಮೊರೆ ಹೋಗಿ ಪರಿಹಾರ ಪಡೆಯುವುದು ನಮ್ಮ ವ್ಯವಸ್ಥೆಯಲ್ಲಿ ತುಸು ಕಷ್ಟವೆ. ನನ್ನ ಪ್ರಕಾರ ಕಾಸರಗೋಡಿನಲ್ಲಿ ಎಂಡೋಸಲ್ಫಾನ್ ಕೀಟನಾಶಕ ಮಾಡಿದ ಅನಾಹುತದಿಂದ ಸಂತ್ರಸ್ತರಾದವರಿಗಿಂತ ಹಲವು ನೂರು ಪಟ್ಟು ಜನ ‘ಹರ್ಬಲ್ **ಫ್’ ನಿಂದ ಸಂತ್ರಸ್ತರಾಗಿದ್ದಾರೆ. ನೋವು ಅನುಭವಿಸುತ್ತಿದ್ದಾರೆ; ಇಲ್ಲ ಸತ್ತು ಹೋಗಿದ್ದಾರೆ.
ವಿಜಯ್ ‘ಹರ್ಬಲ್ **ಫ್’ನಿಂದ ಕಿಡ್ನಿ ಕಳೆದುಕೊಂಡ ಹುಡುಗನೊಬ್ಬನ ನೋವಿನ ಕತೆಯನ್ನು ಬರೆದುಕೊಂಡಿದ್ದನ್ನು ಓದಿದ ನಂತರ ಇದನ್ನೆಲ್ಲಾ ಬರೆಯಬೇಕೆನಿಸಿತು. ಆ ಹುಡುಗನಿಗೆ ಕಾನೂನಿನ ನೆರವು ಕೊಡುವ ಮೂಲಕ ಯಾರಾದರೂ ಸರ್ಕಾರ ಮತ್ತು ಕಂಪನಿಯಿಂದ ಪರಿಹಾರ ಕೊಡಿಸಲು ಮುಂದಾಗಲಿ. ಸರ್ಕಾರ ಯಾಕೆ ನೆರವು ಕೊಡಬೇಕೆಂದು ನೀವು ಕೇಳಬಹುದು. ‘ಹರ್ಬಲ್ **ಫ್’ ಸರ್ಕಾರದ ಮೂಗಿನ ಕೆಳಗೇ ತನ್ನ ನೂರಾರು ಕೋಟಿ ರೂಪಾಯಿಗಳ ವಾರ್ಷಿಕ ವ್ಯಾಪಾರ ಮಾಡುತ್ತಿದೆ. ಜನರ ಆರೋಗ್ಯ, ಪ್ರಾಣಗಳನ್ನು ತನ್ನ ಬಂಡವಾಳ ಮಾಡಿಕೊಂಡಿದೆ. ಆರೋಗ್ಯ ಸಚಿವರಿಗೆ ಯಾರಾದರೂ ಟ್ಯಾಗ್ ಮಾಡಿ. ಆಕಸ್ಮಾತ್ ಬಲಿಷ್ಟ, ಸಮರ್ಥ ಸರ್ಕಾರದವರು ಏನಾದರೂ ಕ್ರಮ ತೆಗೆದುಕೊಂಡಾರು!
ಅನಿಷ್ಟಕ್ಕೆಲ್ಲಾ ಶನೇಶ್ವರ / ಶನೇಶ್ಚರನೆ ಕಾರಣ ಯಾಕಾಗಬಾರದು?
-ರವಿ ಅರೇಹಳ್ಳಿ